ಹರಿಹರ ಅಭಿವೃದ್ಧಿಯಲ್ಲಿ 10 ವರ್ಷ ಹಿಂದೆ ಹೋಗದಿರಲಿ.!!

ಮಂದಾರ ನ್ಯೂಸ್, ಹರಿಹರ: ಹರಿ-ಹರ, ತುಂಗ-ಭದ್ರೆ ಎಂತಹ ಅದ್ಭುತ ನಾಮಗಳು. ತುಂಗಾಭದ್ರಾ ನದಿಯ ದಡದ ಮೇಲೆ ಹೊಯ್ಸಳರ ಕಾಲದ ಪುರಾತನ ದೇವಾಲಯ ಹರಿಹರೇಶ್ವರ ದೇವಸ್ಥಾನವಿದೆ.

ಅದೇ ರೀತಿ ಹರಿಹರ ರಾಜಕೀಯ ಕ್ಷೇತ್ರದಲ್ಲಿ ಅತ್ಯಂತ ಗಮನ ಸೆಳೆದ ಕ್ಷೇತ್ರಗಳಲ್ಲಿ ಒಂದು. ಹರಿ-ಹರ, ತುಂಗೆ-ಭದ್ರೆ ಎರಡೆರಡು ಹೆಸರಿನಂತೆ ಕ್ಷೇತ್ರವು ಎರಡೆರಡು ಪಕ್ಷಗಳ ಆಡಳಿತಕ್ಕೆ ಒಳಪಡುತ್ತಿದೆ.

ಎರಡೆರಡು ಹೆಸರಿನ ನಾಮಫಲ ಇರುವ ಕ್ಷೇತ್ರದಲ್ಲಿ , ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತರುವ ಸಂದರ್ಭದಲ್ಲಿ ಹಾಲಿ ಶಾಸಕರು ಮಾಜಿಗಳಾಗುತ್ತಾರೆ, ಮಾಜಿ ಶಾಸಕರು ಹಾಲಿಗಳಾಗುತ್ತಾರೆ. ಮತ್ತೆ ಎಂದಿನಂತೆ ಆರೋಪಗಳ ಸುರಿಮಳೆ.

ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುವ ಸರ್ಕಾರಗಳು ಒಂದಾದರೆ, ಕ್ಷೇತ್ರದಲ್ಲಿ ಆಯ್ಕೆಯಾಗುವ ಜನಪ್ರತಿನಿಧಿಯೇ ಬೇರೆ ಪಕ್ಷದವರಾಗಿರುತ್ತಾರೆ. ಇಲ್ಲಿ ಆಯ್ಕೆಯಾದ ಜನಪ್ರತಿನಿಧಿ ಒಂದು ಪಕ್ಷದವರಾದರೆ, ರಾಜ್ಯದಲ್ಲಿ ಆಳ್ವಿಕೆ ನಡೆಸುವ ಸರ್ಕಾರ ಇನ್ನೊಂದು ಪಕ್ಷದಾಗಿರುತ್ತದೆ. ಇದರಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಾ ಸಾಗುತ್ತದೆ.

ಈ ಹಿಂದೆ ಹರಿಹರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಶಾಸಕರಾಗಿ ಎಸ್ .ರಾಮಪ್ಪನವರು ಆಯ್ಕೆಯಾಗಿರುತ್ತಾರೆ. ಆದರೆ ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿರುತ್ತದೆ. ರಾಮಪ್ಪ ಶಾಸಕರಾದ ಸಂದರ್ಭದಲ್ಲಿ ಹರಿಹರ ಕ್ಷೇತ್ರ ಅಭಿವೃದ್ಧಿಗೆ ಬಿಜೆಪಿ ನೇತೃತ್ವದ ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ, ವರ್ಗಾವಣೆ ಮತ್ತಿತರ ವಿಷಯದಲ್ಲಿ ಮಾಜಿ ಶಾಸಕರು ಮೂಗು ತೋರುತ್ತಾರೆ ಎಂಬ ಆರೋಪವನ್ನು ಅಂದಿನ ಶಾಸಕರಾಗಿರ್ತಕ್ಕಂತ ಸಂದರ್ಭದಲ್ಲಿ ಎಸ್. ರಾಮಪ್ಪನವರು ಪ್ರತಿ ಸಭೆ- ಸಮಾರಂಭದಲ್ಲಿ ಮಾಡುತ್ತಿದ್ದರು,ಇದು ಕ್ಷೇತ್ರದ ಜನರಿಗೆ ಗೊತ್ತಿರುವ ವಿಚಾರ.

ಇಂದು ಹರಿಹರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಬಿ.ಪಿ ಹರೀಶ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಅಂದು ಬಿಜೆಪಿ ಸರ್ಕಾರ ಹರಿಹರ ಅಭಿವೃದ್ಧಿ ವಿಚಾರದಲ್ಲಿ ರಾಮಪ್ಪನವರ ಜೊತೆ ನಡೆದುಕೊಂಡ ರೀತಿಯಲ್ಲೇ ಇಂದು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಪಕ್ಷ ನಡೆದುಕೊಂಡರೆ ಕ್ಷೇತ್ರದ ಅಭಿವೃದ್ಧಿ ಮತ್ತೆ 10 ವರ್ಷ ಹಿಂದೆ ಸರಿಯುತ್ತದೆ. ಆಗ ಶಾಸಕರಾದ ಬಿಪಿ ಹರೀಶ್ ಅವರು ರಾಮಪ್ಪನವರಂತೆ ಆರೋಪ ಮಾಡದಿರಲಿ..

ಅಧಿಕಾರದಲ್ಲಿರುವ ಪಕ್ಷಗಳ ಜೊತೆ ಸಮರ್ಥವಾಗಿ ಹೋರಾಟ ನಡೆಸಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತರುವಂತಹ ಸಾಮರ್ಥ್ಯ ಇರುವಂತಹ ನಾಯಕ ಯಾರಾದರೂ ಇದ್ದರೆ ಅದು ಎಚ್.ಎಸ್. ಶಿವಶಂಕರ್ ಆದರೆ ಕ್ಷೇತ್ರದ ಮತದಾರ ಈ ಬಾರಿಯೂ ಅವರ ಕೈಹಿಡಿಯಲಿಲ್ಲ.

ಈ ಹಿಂದೆ ಹೆಚ್.ಎಸ್ ಶಿವಶಂಕರ್ ಹರಿಹರ ವಿಧಾನಸಭಾ ಕ್ಷೇತ್ರದ ಶಾಸಕರಾದಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು. ಆದರೆ ಶಿವಶಂಕರವರು ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಪಕ್ಷದ ಜೊತೆ ಸಮರ್ಥವಾಗಿ ಹೋರಾಟ ನಡೆಸಿದ ಫಲವಾಗಿ ಕ್ಷೇತ್ರಕ್ಕೆ ಸರಿಸುಮಾರು 400 ಕೋಟಿ ಹೆಚ್ಚು ಅನುದಾನ ತರಲು ಸಾಧ್ಯವಾಯಿತು, ಕ್ಷೇತ್ರ ಅಭಿವೃದ್ಧಿ ಹೊಂದಲು ಕಾರಣವಾಯಿತು. ಮತದಾರ ಇದು ಯಾವುದನ್ನು ನೆನಪು ಮಾಡಿಕೊಳ್ಳಲೇ ಇಲ್ಲ. ಅಭಿವೃದ್ಧಿಯ ಕಾರ್ಯಗಳು ಸಮರ್ಥ ನಾಯಕನಿಂದ ಮಾತ್ರ ಸಾಧ್ಯ ಎಂಬುದು ಅಂದು ಶಿವಶಂಕರ್ ಸಾಬೀತು ಮಾಡಿ ತೋರಿಸಿದರು.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಎಚ್.ಎಸ್ ಶಿವಶಂಕರವರ ಗೆಲುವಿಗೆ ಅಡ್ಡವಾಗಿದ್ದು ಕಾಂಗ್ರೆಸ್ ಪಕ್ಷದ ಗ್ಯಾರಂಟಿ, ಜೊತೆಗೆ ಒಂದು ಸಮುದಾಯದ ಮತಗಳು ಶಿವಶಂಕರವರ ಬೆನ್ನಿಗೆ ನಿಲ್ಲುತ್ತೇವೆ ಎಂದು ಹೇಳಿ ಕೊನೆ ಕ್ಷಣದಲ್ಲಿ ಬದಲಾಗಿದ್ದು ,

ಕಳೆದ ಚುನಾವಣೆಯಲ್ಲಿಯೂ ಶಿವಶಂಕರವರಿಗೆ ಸಹಕಾರ ನೀಡುತ್ತೇವೆ ಅವರ ಗೆಲುವಿಗೆ ಸಹಕರಿಸುತ್ತೇವೆ ಎಂದು ಹೇಳಿ ಕೊನೆ ಕ್ಷಣದಲ್ಲಿ ಅವರ ಕೈಹಿಡಿಯಲಿಲ್ಲ. ಈ ಆರೋಪ ಈ ಬಾರಿಯೂ ಕೇಳಿ ಬಂದಿತ್ತು.  ಈ ಬಾರಿಯೂ ಒಂದು ಸಮುದಾಯದ ಮತಗಳು ಶಿವಶಂಕರ್ ಅವರ ಬೆನ್ನಿಗೆ ನಿಲ್ಲಲಿಲ್ಲ ಎಂಬ ಆರೋಪ ಕ್ಷೇತ್ರದ ಮತದಾರರಿಂದ ಕೇಳಿ ಬರುತ್ತಿದೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದ್ವಿತೀಯ ಸ್ಥಾನ ಪಡೆಯಲು ಪ್ರಮುಖ ಕಾರಣ ಒಂದು ಸಮುದಾಯದ ಮತಗಳು ಅಭ್ಯರ್ಥಿಯ ಬೆಂಬಲಕ್ಕೆ ಗಟ್ಟಿಯಾಗಿ ನಿಂತಿದ್ದು. ಮತ್ತೊಂದು ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು ಮತದಾರರ ಮೇಲೆ ಪ್ರಭಾವ ಬೀರಿದ್ದು. ಇವುಗಳಿಗೆ ಮನಸ್ಸುತ ಮತದಾರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಬೆಂಬಲಕ್ಕೆ ನಿಂತರು. 

ಇದರ ಜೊತೆಗೆ ಒಂದು ಸಮುದಾಯದ ಮತಗಳು ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಗಟ್ಟಿಯಾಗಿ ನಿಂತರೆ ಮತ್ತೊಂದು ಸಮುದಾಯದ ಮತಗಳು ವಿಭಜನೆಯಾದವು. ವಿಭಜನೆಯಾದ ಮತಗಳಲ್ಲಿ ಬಹು ಪಾಲು ಮತಗಳು ಬಿಜೆಪಿ ಅಭ್ಯರ್ಥಿಯ ಪರವಾಗಿ ನಿಂತ ಕಾರಣ ಬಿ.ಪಿ ಹರೀಶ್ ಅಲ್ಪ ಮತಗಳ ಅಂತರದಿಂದ ಗೆಲುವು ಸಾಧಿಸಲು ಸಾಧ್ಯವಾಯಿತು.

ಮತದಾರರು ಅರ್ಥೈಸಿಕೊಳ್ಳಬೇಕಾಗಿತ್ತು ಕ್ಷೇತ್ರದ ಅಭಿವೃದ್ಧಿಗೆ ಯಾರು ಸಮರ್ಥರು ,ಯಾರಿಂದ ಅನುದಾನ ತರಲು ಸಾಧ್ಯ, ಯಾರು ನಮ್ಮಗಳ ಕಷ್ಟಕ್ಕೆ ಸ್ಪಂದಿಸುವರು, ಯಾರಿಂದ ಕ್ಷೇತ್ರದ ನೆಮ್ಮದಿ ಸಾಧ್ಯ, ಈ ವಿಚಾರಗಳನ್ನು ಮತದಾರರು ಅರ್ಥ ಮಾಡಿಕೊಂಡಿದ್ದರೆ ಚೆನ್ನಾಗಿತ್ತು.

23 ಮೇ 2023 ಮಂಗಳವಾರ ನಗರದ ಹೆಚ್ ಕೆ ಶಿವಪ್ಪ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಪಕ್ಷದ ಆತ್ಮವಲೋಕನ ಸಭೆಯನ್ನ ಏರ್ಪಡಿಸಲಾಗಿದೆ. ಜೆಡಿಎಸ್ ಪಕ್ಷದ ಅಭ್ಯರ್ಥಿ ಹೆಚ್.ಎಸ್ ಶಿವಶಂಕರ್ ಅವರ ಸೋಲಿಗೆ ಕಾರಣವನ್ನು ಹುಡುಕುವ ಪ್ರಯತ್ನ ಮತ್ತು ನಾವು ಎಡವಿದ್ದು ಎಲ್ಲಿ, ಇವುಗಳ ಬಗ್ಗೆ ಪಕ್ಷದ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಮತ್ತು ಅಭಿಮಾನಿಗಳು ಕಾರ್ಯಕ್ರಮಕ್ಕೆ ಆಗಮಿಸುವಂತೆ ಪಕ್ಷದ ವಿವಿಧ ಘಟಕದ ಪದಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

Post a Comment

0 Comments