ಹರಿಹರ: ವಿಧಾನಸಭೆಯಲ್ಲಿ ಬಿಜೆಪಿ ಸೋಲಿಗೆ ನಾಯಕರ ದೌರ್ಬಲ್ಯ ಕಾರಣ. ನನಗೂ ದಾವಣಗೆರೆ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗುವ ಅಪೇಕ್ಷೆ ಇದೆ. ಪಕ್ಷದ ನಾಯಕರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ನೋಡೋಣ ಎಂದು ಹರಿಹರದಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಹೇಳಿದರು.
ನಿನ್ನೆ ಹರಿಹರದಲ್ಲಿ ನಡೆದ ಹಿಂದೂ ಮಹ ಗಣಪತಿಯ ಬೃಹತ್ ಶೋಭಾಯಾತ್ರೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಹಾಗಣಪತಿಯ ಆಶೀರ್ವಾದವನ್ನು ಪಡೆದು ಕೆಲವತ್ತು ಅಭಿಮಾನಿಗಳೊಂದಿಗೆ ಕುಣಿದು- ಕುಪ್ಪಳಿಸಿದ ನಂತರ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ತಾವು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು, ಪಕ್ಷದ ಹೈಕಮಾಂಡ್ ನನ್ನನ್ನು ಗುರುತಿಸಿ ಟಿಕೆಟ್ ನೀಡಿದರೆ ಸ್ಪರ್ಧಿಸುತ್ತೇನೆ ಎಂದು ಹೇಳಿದರು.
ಹರಿಹರದಲ್ಲಿ ಮಾತನಾಡಿದ ಮಾಜಿ ಸಚಿವ ರೇಣುಕಾಚಾರ್ಯ, ಸ್ವಪಕ್ಷದ ವಿರುದ್ಧವೇ ಗುಡುಗಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ರಾಷ್ಟ್ರನಾಯಕರ ಮಟ್ಟದ ಚರ್ಚೆಯಾಗುತ್ತಿದೆ. ಮೈತ್ರಿ ಎಂದರೆ ಕಾರ್ಯಕರ್ತರ ನಡುವೆ ಸಾಮರಸ್ಯ ಇರಬೇಕು, ಜೆಡಿಎಸ್, ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷ ಆಗುತ್ತಿದೆ ಎಂದು ಹೇಳಿದರು.
ನಾನು ಬಿಜೆಪಿ, ಜೆಡಿಎಸ್ ಮೈತ್ರಿ ವಿರೋಧ ಮಾಡಲ್ಲ. ಬಿಜೆಪಿ ಕಾರ್ಯಕರ್ತರು ಜೆಡಿಎಸ್, ಕಾಂಗ್ರೆಸ್ ವಿರೋಧಿಸಿಕೊಂಡು ಬಂದಿದ್ದಾರೆ. ಈ ಹಿಂದೆ ಜೆಡಿಎಸ್ ಗೆ ವಚನ ಭ್ರಷ್ಟರು ಎಂದು ನಾವೇ ಹೇಳಿದ್ದೆವು. ಅಂಥವರ ಜತೆ ಯಾವ ರೀತಿ ಮೈತ್ರಿ ಎಂದು ಜನ ಕೇಳುತ್ತಿದ್ದಾರೆ. ರಾಜ್ಯ ನಾಯಕರನ್ನು ಹೊರಗಿಟ್ಟು ಮೈತ್ರಿ ಅಪೂರ್ಣ ಆಗುತ್ತದೆ. ರಾಜ್ಯ ನಾಯಕರು, ಬಿಎಸ್ ವೈ ರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ನಮ್ಮ ರಾಜ್ಯ ನಾಯಕರು ಬಿಎಸ್ ವೈರನ್ನು ಕತ್ತಲೆಯಲ್ಲಿಟ್ಟು ಮೈತ್ರಿಗೆ ಯೋಚಿಸುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿ ಒಂದು ವಿಭಿನ್ನ ಪಕ್ಷವೆಂದು ಹೇಳುತ್ತೇವೆ. ಆದರೆ ಬಿಜೆಪಿ ಕಾರ್ಯಕರ್ತರನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಬೇರೆಯವರಿಗೆ ಟೀಕೆ ಮಾಡಲು ನಮಗೆ ಯಾವ ನೈತಿಕತೆ ಇದೆ ಎಂದು ಹೇಳಿದ ಅವರು, ಲೋಕಸಭೆ ಚುನಾವಣೆ ಪೂರ್ವದಲ್ಲೇ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕರ ಆಯ್ಕೆ ಮಾಡಲಿ. ನಾನು ಸಂಘಟನೆಯಿಂದ ಬಂದವನು, ಕಾಂಗ್ರೆಸ್ ಸೇರುತ್ತೇನೆಂದು ಎಲ್ಲೂ ಹೇಳಿಲ್ಲ. ನಮ್ಮದೇ ಪಕ್ಷದ ಕೆಲವರು ಹಾಗೇ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
0 Comments